Wednesday 1 April 2020

ಪ್ರಣಯ ಪಯಣ pranaya payana


Imaginative write-up

ಕಥೆ या ಹರಟೆ -  ಪ್ರಣಯ ಪಯಣ pranaya payana

"ಪ್ರಣಯ" ಎಲ್ಲರೂ ಇಷ್ಟಪಡುವಂತಹ ವಿಷಯ. ಏನೆನ್ನುತ್ತೀರಾ? ಪ್ರಣಯ, ಪ್ರೀತಿ, ಒಲುಮೆ, ಅನುರಾಗ, ಪ್ರೇಮ, ಲವ್ ಎಂಬುದು ಯವ್ವನದಲ್ಲಿ ಸರ್ವೇ ಸಾಮಾನ್ಯವಾಗಿ ಎಲ್ಲ ಜೀವಿಗಳೂ ಬಯಸುವವಂಥಹದು. ಆದರೆ "ಪಯಣ" ಈ ಜೀವನದ ಪರ್ಯಂತ ಇರುವಂಥಹದು. ಭೂಮಿಯಲ್ಲಿ ಜನ್ಮವೆತ್ತಿದ ದಿನದಿಂದ ಈ ಪಯಣ ಪ್ರಾರಂಭವಾಗಿದ್ದು ಮರಣ ಕಾಲದವರೆಗೂ ಇದು ಅನಿವಾರ್ಯ. ಅಂದರೆ ಈ ಭುವಿಯಲ್ಲಿ ಎಲ್ಲ ಪ್ರಾಣವಿರುವ ಜೀವಿಗೆ ಪ್ರಾಣ ಭಯವಿದ್ದರೂ ಪ್ರಾಣ ಹೋಗುವವರೆಗೂ ಈ ಪಯಣ ಇದ್ದದ್ದೇ.

ಹುಟ್ಟಿದ ದಿನದಿಂದ ಇಲ್ಲಿಯವರೆಗೆ ನನ್ನ ಪಯಣ ಮತ್ತು ನನ್ನ ಯವ್ವನದ ದಿನಗಳ ಪ್ರಣಯ - ಇವುಗಳನ್ನು ಬರೆಯಲು ಕುಳಿತರೆ ಶ್ರೀ ಭೈರಪ್ಪನವರ "ದಾಟು" ಕಾದಂಬರಿಯಲ್ಲಿರುವ ಪುಟಗಳನ್ನು ಮೀರಿ ಬರೆಯಬಹುದು, ಓದುವವರು ಇರುವುದಿಲ್ಲ ಅಷ್ಟೇ. ನೀವು ಈ ಹೊಸ ಪುಸ್ತಕದ ಮೊದಲ ನಾಲ್ಕೈದು ಪುಟಗಳನ್ನು ಓದಿ ಮಣಭಾರವಿರುವದರಿಂದ ಪುಸ್ತಕ ಬಿಸಾಕಿ ಮುಖ್ಯ ವಿಷಯಗಳನ್ನೇ ಓದಲು ಬಿಟ್ಟು ಬಿಡಬಹುದು.

ನನಗೆ ಗೊತ್ತು ನೀವು ಈಗ ಕೈಯಲ್ಲಿ ಪತ್ರಿಕೆ ಹಿಡಿದು ಈ ನನ್ನ ಬರಹ ಓದಲು ತೆಗೆದು ಎಲ್ಲಿಗಾದರೂ  ಪಯಣ ಮಾಡುತ್ತಿರಬಹುದೆಂದು. ನಿಮ್ಮ ಆ ಪ್ರಯಾಣದ ಆಯಾಸ ನೀಗಿಸಲು ನನ್ನ ಈ ಪ್ರಣಯ-ಪಯಣಗಳ ಅನುಭವಗಳನ್ನು ಇಲ್ಲಿ ಚಿಕ್ಕದಾಗಿ ವಿವರಿಸಲು ಇಷ್ಟ (ಕಷ್ಟ) ಪಡುತ್ತೇನೆ. ಏನಂತೀರಾ ?

ಮತ್ತೇ ಯೋಚನೆ ಮಾಡಬೇಡಿ. ಬೇತಾಳ ಕತೆಗಳ ಹಾಗೆ ನಿಮ್ಮನ್ನು ಕೊನೆಯಲ್ಲಿ ಯಾವ ಪ್ರಶೋತ್ತರಗಳನ್ನೂ ಕೇಳುವುದಿಲ್ಲ. ಪ್ರಶ್ನೆಗಳಿದ್ದರೂ ಪ್ರಶ್ನೆಗಳಿಗೆ ನೀವು ಉತ್ತರ ಕೊಡಬೇಕೆಂದು ಬಯಸುವುದಿಲ್ಲ. ಒಂದು ಸಮಯ ಪ್ರಶ್ನೆಗಳಿದ್ದು, ಉತ್ತರ ಕೊಡಲು ನೀವು ಬಯಸಿದರೆ, ನೀವು ಉತ್ತರ ಕೊಟ್ಟಾಗ ಆ ಉತ್ತರ ಸರಿಯಲ್ಲದಿದ್ದರೆ ನಿಮ್ಮ ತಲೆ ನೂರು ಹೊಳಾಗುವುದಿಲ್ಲ. ಆದರೂ ಪ್ರಶ್ನೆಗಳಿಲ್ಲದೆಯೇ ನಿಮ್ಮ ತಲೆ ಸಾವಿರ ಹೋಳಾಗುವ ಹಾಗೆ ತಲೆ ಸಿಡಿದು ಝoಡು ಬಾಮ್, ಡಬಲ್ ಆಕ್ಷನ್ ವಿಕ್ಸ್ ಬಾಮ್, ತ್ರಿಬಲ್ ಆಕ್ಷನ್ ಟೈಗರ್ ಬಾಂ ಕೂಡ ಉಪಯೋಗಕ್ಕೆ ಬರದಿರುವ ಭಯಂಕರವಾದಂತಹ ಅನುಭವ ಆಗಲೂಬಹುದು. 

ಏನಿದು, ಹರಿಕಥೆದಾಸರು ಸೀತಾ ಸ್ವಯಂವರದ ಹರಿಕಥೆಗೆ ಮೀಸಲಾದ ಎರಡೂವರೆ ಗಂಟೆಯಲ್ಲಿ, ಸಿನಿಮಾ ತಾರೆಯರ ತಾರಾಬಲ, ತಾರೆಯರ ಸ್ವಯಂವರದಿಂದ ಅವರ ಮಕ್ಕಳ ಬಲಾಬಲಗಳವರೆಗೆ, ಕೇಂದ್ರ ಸರ್ಕಾರದ ನೀತಿಗಳಿಂದ ಲೋಕಲ್ ಪಂಚಾಯಿತಿ ಸಮಿತಿಯ ಉದ್ದೇಶಗಳವರೆಗೆ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಸಕಲ ವಿಷಯಗಳವರೆಗೆ, ಹಿಂದಿನ ಪ್ರಳಯ ಕಾಲದಿಂದ ಈಗಿನ ಪ್ರಳಯಾಂತಕ ಆಲ್ಕೈದಾದವರನ್ನು ಹಿಡಿಯುವವರೆಗೂ, ಏನೆಲ್ಲ ಹೇಳಿ ಸುಮಾರು ಒಂದೂವರೆ ಗಂಟೆ ಕಳೆದ ಹಾಗೆ ನಾನಿಲ್ಲಿ ಬಡಬಡಿಸುತ್ತಿದ್ದೇನೆ ಎಂದು ತಿಳಿದಿದ್ದೀರಾ ? ಏನು ಮಾಡಲಿ ಮುಖ್ಯ ವಿಷಯವೇ ಮುಖ್ಯವಿಲ್ಲದಿರುವಾಗ ನಿಮಗೆ ಸ್ವಲ್ಪವಾದರೂ ಟೈಗರ್ ಬಾಮ್ ಉಳಿಸೋಣವೆಂದು ನನ್ನ ಆಸೆ.

ಸಾಕಲ್ಲವೇ ಪೀಠಿಕೆ !

1969 ಏಪ್ರಿಲ್ 1

ಈ ಭಾರತದ ಭುವಿಗೆ ಭಾರವಾಗಲೆಂದು ಆ ಬ್ರಹ್ಮನು ನನ್ನನು ಕಳಿಸಿದ ದಿನ. ಅಂದಿನಿಂದ ಸುಮಾರು ಹದಿನೈದು ವರುಷಗಳು ಮನೆಯ ಹಿರಿಯರ ಹಿಡಿತದಲ್ಲಿ (ಮಾರ್ಗದರ್ಶನದಲ್ಲಿ ?) ಕಳೆದ ದಿನಗಳು. ಇವು ಯಾವುವೂ ಸರಿಯಾಗಿ ನೆನಪಿಲ್ಲ.

1984 ಜೂನ್ 1 

ನಾನು ಕಾಲೇಜಿಗೆ ಸೇರಿದ ದಿನ. ಕಾಲೇಜಿನಲ್ಲಾದದ್ದು ಇಂದಿಗೂ ಮರೆಯದ ದಿನಗಳು. ಮೊದಲು ಸೌಂದರ್ಯಳನ್ನು ನೋಡಲು ಅಧೈರ್ಯ. ಆದರೂ ಧ್ಯೇಯ ಒಂದೇ - ಅವಳ ಪ್ರೀತಿ ಪ್ರೇಮ ಪಡೆಯ ಬೇಕೆಂದು. ಧೈರ್ಯಮಾಡಿ ಮಾತನಾಡಿಸಿ ನಂತರ ಪ್ರಾರಂಭ ಪ್ರೀತಿ. ಸ್ನಾತಕೋತ್ತರ ಪದವಿಯ ವರೆಗೂ ಅವಳು ನನ್ನ ಸಹಪಾಠಿ. 

1991 ದಿಶೆಂಬರ್ 1 

ಸೌಂದರ್ಯಳಿಗೆ ಸುದಿನ. ಅಂದರೆ ಅಂದು ನನಗೆ ಕೆಲಸ, ನೌಕರಿ, job ಸಿಕ್ಕಿದ ದಿನ.

1992 ಫೆಬ್ರುವರಿ 29

ನನ್ನ ಪ್ರಣಯದ ಫಲ ಅಧೀಕೃತವಾಗಿದ್ದು. ಅರ್ಥಾತ್ ನಾನು ಸೌಂದರ್ಯಳನ್ನು ಮದುವೆಯಾದ ದಿನ.

1992 ಫೆಬ್ರುವರಿ 29ರಿಂದ ಇಲ್ಲಿಯವರೆಗಿನ ಮುಖ್ಯ ದಿನಗಳು ಅಥವಾ ತಾರೀಖುಗಳು ನೆನಪಿನಲ್ಲಿಡಲು ಏಕೋ ಮನಸ್ಸಿಲ್ಲ ಅಥವಾ ಸೌಂದರ್ಯಳೇ ಈ ಕೆಲಸವನ್ನು ಮಾಡುವುದರಿಂದ ಇರಬಹುದು.

ಇಲ್ಲಿಯವರೆಗಿನ ವರುಷಗಳು ಬೇವು ಬೆಲ್ಲದ ತರಹ ಅಥವಾ कभी ख़ुशी कभी गम ತರಹ. ಆದರೂ ನನಗೆ ಸದಾ ಖುಷಿ ಕೊಡುವ ದಿನ ಮಾತ್ರ ತಾರೀಖು ಫೆಬ್ರುವರಿ 29. ಹಾಗೆಯೇ ಸೌಂದರ್ಯಳಿಗೂ ಸದಾ ಗಮ್ ಕೊಡುವ ತಾರೀಖು ಫೆಬ್ರುವರಿ 29. ಕಾರಣ ಇಷ್ಟೇ. ನಮ್ಮ ಮದುವೆಯ ವಾರ್ಷಿಕೋತ್ಸವ ನಾಲ್ಕು ವರುಷೋಕ್ಕೊಮ್ಮೆ ಬರುವುದು. ಆದರೂ ಈ ನಾಲ್ಕು ವರ್ಷಕ್ಕೊಮ್ಮೆ ನನಗೆ ಆಫೀಸಿನಲ್ಲಿ ಸಿಗುವ LTC ಸೌಲಭ್ಯವನ್ನು ಉಪಯೋಗಿಸಿ ಒಂದು ತಿಂಗಳ ರಜೆಯನ್ನೂ ಆಫೀಸಿನವರಿಗೆ ಮಾರಿ ಹಣ ಪಡೆದು ಸೌಂದರ್ಯಳ ಜೊತೆಗೆ ಎಲ್ಲಾದರೂ ಪಯಣಿಸಿ ಅವಳ ಸುಮುಖ ಸದಾ ನಗುಮುಖವಾಗಿಡುವ ನನ್ನ ಪ್ರಯತ್ನವಂತೂ ಫಲಿಸುತ್ತಲೇ ಇದೆ.

ಇದೇ  ನೋಡಿ ನನ್ನ ಜೀವನದ ಮೂವತ್ಮೂರು ವರುಷಗಳ ಪಯಣ ಹೇಗಿದೆ ?

ನಾನು ಕೊಟ್ಟಿರುವ ಶೀರ್ಷಿಕೆಯ "ಪಯಣ" ಶಬ್ದ ನೋಡಿ ಏನೋ, ಪ್ರವಾಸ, ಪರ್ಯಟನ, ಸಂಚಾರ, ದೇಶಾಟನೆ ಬಗ್ಗೆ ಬರೆದಿರಬಹುದೆಂದು ನೀವು ಓದುವ ಮೊದಲು ತಿಳಿದಿರಬಹುದು. ನನ್ನ ಲೇಖನ ಮತ್ತೂಮ್ಮೆ ಓದಿ ನೋಡಿ. ಎಲ್ಲಾ  ಹಿಂಟ್ (hint/clue) ಕೊಟ್ಟಿದ್ದೇನೆ. ಮತ್ತೇ ನಾನು ಏಪ್ರಿಲ್ 1 ರಂದು ಹುಟ್ಟಿದ್ದು ಸ್ನೇಹಿತರೆಲ್ಲ ಇದುವರೆವಿಗೂ ನನ್ನನ್ನು ರೇಗಿಸಿದ್ದರಿಂದ ಆ ಸ್ನೇಹಿತರನ್ನೆಲ್ಲ ಫೂಲ್ ಮಾಡೋಣಾಂತ ಈ ಹಾಳು  ಹರಟೆ. ಮೊದಲಿಲ್ಲ ಕೊನೆಯಿಲ್ಲ. ಯಾವ ವಿಷಯದ ಪ್ರಸ್ತಾಪವಿಲ್ಲ, ಬರೀ ತಾಪ ಮಾತ್ರ ಇದೆ.  

ಹಾಗೆಯೇ ನನ್ನ ಲೇಖನದ ಶೀರ್ಷಿಕೆಯನ್ನು "ಏಪ್ರಿಲ್ ಫೂಲ್" ಅಂತಲೂ ಬದಲಾಯಿಸಿಕೊಳ್ಳಿ. ನಾನಿನ್ನು ಬರಲೇ, ಸೌಂದರ್ಯ ಕಾಯುತ್ತಿದ್ದಾಳೆ ನನ್ನ ಸಿಹಿ ಮುತ್ತಿಗಾಗಿ !

end- ನಡೆದದ್ದು ಅಲ್ಲ imagination written sometime ಇನ್ 2002

.
back to  

end.

.

No comments:

Post a Comment